ಯಕ್ಷಾಂಗಣ ಟ್ರಸ್ಟ್, ಬೆಂಗಳೂರು - ಯಕ್ಷಗಾನ ಉತ್ಸವ ಮತ್ತು ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಡಿಸೆ೦ಬರ್ 10 , 2014
|
ಕಳೆದ ಹದಿನಾಲ್ಕು ವರ್ಷಗಳಿಂದ ಯಕ್ಷಗಾನ ಕಲೆಯ ಕುರಿತಾಗಿ ಗಮನಾರ್ಹ ಕೆಲಸ ನಡೆಸಿಕೊಂಡು ಬಂದಿರುವ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ನವರು ಡಿಸೆಂಬರ್ 11 ರಿಂದ 13 ರ ತನಕ ಉಡುಪಿ ಜಿಲ್ಲೆಯಲ್ಲಿ ಯಕ್ಷಗಾನ ಉತ್ಸವ ನಡೆಸಲಿದೆ.
11-12-2014 ರಂದು ಮಧ್ಯಾಹ್ನ 3ಕ್ಕೆ ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಅಲ್ಲಿನ ಸಭಾಂಗಣದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಐದು ದಶಕಗಳ ಕಾಲ ಕಲಾವಿದರಾಗಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ಶ್ರೀ ಮೊಳಹಳ್ಳಿ ಹೆರಿಯ ನಾಯ್ಕರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಸ್. ನಾಗೇಶ್ ಶ್ಯಾನುಭೋಗರು ಭಾಗವಹಿಸಲಿದ್ದಾರೆ. ಅಂದು “ಕಂಸವಧೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
12-12-2014 ರಂದು ಮಧ್ಯಾಹ್ನ 2ಕ್ಕೆ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಅಲ್ಲಿನ ಚೇತನ ಸಭಾಭವನದಲ್ಲಿ “ಚಂದ್ರಹಾಸ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
13-12-2014ರಂದು ಸಂಜೆ 6ಕ್ಕೆ ಕುಂದಾಪುರದ ಪಾರಿಜಾತ ಸರ್ಕಲ್ ಬಳಿಯಲ್ಲಿರುವ ಕಲಾಮಂದಿರಲ್ಲಿ ಯಕ್ಷಗಾನ ಉತ್ಸವದ ಸಮಾರೋಪ ಮತ್ತು ಚೆಂಡೆಯ ವಾದನದಲ್ಲಿ ಅದ್ವಿತೀಯತೆ ತೋರಿ, ಯಕ್ಷಕಲೆಯ ಮಿನುಗುತಾರೆಯಾಗಿ ಕಾಣಿಸಿಕೊಂಡ ಶ್ರೀ ಮಂದಾರ್ತಿ ರಾಮರವರಿಗೆ ಯಕ್ಷಾಂಗಣ ಟ್ರಸ್ಟ್ನ “ಯಕ್ಷಸನ್ಮಾನ-2014 ರ ಸನ್ಮಾನದೊಂದಿಗೆ ಪ್ರಶಸ್ತಿ ಪತ್ರ ಮತ್ತು 10,000/-ರೂ ನೀಡಲಿದ್ದಾರೆ.
ಅಂದು ಮುಖ್ಯ ಅತಿಥಿಯಾಗಿ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರಾದ ಶ್ರೀ ಎಚ್. ಶ್ರೀಧರ ಹಂದೆ, ಕಲಾ ವಿಮರ್ಶಕರಾದ ಶ್ರೀ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ, ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ ಹೆಮ್ಮಾಡಿ, ಉಡುಪಿಯ ಶ್ರೀ ಗಣೇಶದುರ್ಗಾ ಚಾರಿಟೇಬಲ್ ಟ್ರಸ್ಟ್ನ ಮೆನೇಜಿಂಗ್ ಟ್ರಸ್ಟೀಯಾದ ಶ್ರೀ ತೇಜೇಶ್ವರ ರಾವ್ ಮತ್ತು ಯಕ್ಷಾಂಗಣ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟೀಯಾದ ಶ್ರೀಮತಿ ವೀಣಾ ಮೋಹನ್ರವರು ಭಾಗವಹಿಸಲಿದ್ದಾರೆ.
ಅಂದು “ಮಾಯಾಮೃಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಮೂರು ಯಕ್ಷಗಾನದಲ್ಲಿ ಲಂಬೋದರ ಹೆಗಡೆ, ದೇವರಾಜ್ ದಾಸ್, ಗಣಪತಿ ಎಸ್. ಭಟ್, ಮಾಧವ ಮಣೂರು, ಮಂಜುನಾಥ ನಾವುಡ, ಶಿವಾನಂದ ಕೋಟ, ತಮ್ಮಣ್ಣ ಗಾಂವ್ಕರ್, ಉದಯ ಹೆಗಡೆ ಕಡಬಾಳ, ಸುಜಯೀಂದ್ರ ಹಂದೆ, ಗಣೇಶ ಉಪ್ಪುಂದ, ಕಡ್ಲೆ ಗಣಪತಿ ಹೆಗಡೆ, ಉದಯ ಬೋವಿ, ವಿಶ್ವನಾಥ್ ಶೆಟ್ಟಿ, ನರಸಿಂಹ ತುಂಗ, ರಮೇಶ್ ಶೆಟ್ಟಿ, ಮಾಧವ ನಾಗೂರು, ನವೀನ್ ಕೋಟ, ನಾಗರಾಜ್ ಎಸ್ ಮತ್ತು ಇನ್ನಿತರರು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮದ ಸಂಯೋಜನೆಯನ್ನು ಬೆಂಗಳೂರಿನ ಯಕ್ಷದೇಗುಲದ ವ್ಯವಸ್ಥಾಪಕರಾದ ಕೋಟ ಸುದರ್ಶನ ಉರಾಳ ಮಾಡಲಿದ್ದಾರೆ ಎಂದು ಯಕ್ಷಾಂಗಣ ಟ್ರಸ್ಟ್ನ ಮೇನೆಜಿಂಗ್ ಟ್ರಸ್ಟೀಯವರು ಸುದ್ದಿಯಲ್ಲಿ ತಿಳಿಸಿದ್ದಾರೆ.
ಕೋಟ ಸುದರ್ಶನ ಉರಾಳ
ಹಂದಟ್ಟು-ಕೋಟ, ಉಡುಪಿ-576221
9448547237
ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನೀಡುವ ಯಕ್ಷಸನ್ಮಾನ-2014 ರ ಸನ್ಮಾನ ಪಡೆಯುತ್ತಿರುವ ಶ್ರೀ ಮಂದಾರ್ತಿ ರಾಮನವರ ಕಿರುಪರಿಚಯ
ಪುರಾಣ ಪ್ರಸಿದ್ಧಿ, ಕರಾವಳಿಯ ಭಾರ್ಗವ ರಾಮರ ನೆಲೆಯಲ್ಲಿ ಮೇಳೈಸಿದ ಶ್ರೀಮಂತ ಕಲಾಸಿರಿ ಯಕ್ಷಗಾನ ಇಂದು ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಈ ಕಲೆಯ ನಾವೀನ್ಯತೆಯೊಂದಿಗೆ ಮೇರುಸ್ಥಾನ ಹೊಂದುವಲ್ಲಿ ದುಡಿದು, ಮರೆಯಾದ ನೂರಾರು ಕಲಾವಿದರೇ ಸಾಕ್ಷಿ. ಯಕ್ಷಕಲೆಯಲ್ಲಿನ ಪ್ರೇಕ್ಷಕರ ಸೆಳೆತಕ್ಕೆ ಕಾರಣ ಹಿಮ್ಮೇಳದ ಮಾದ್ಯುರತೆ, ಅದರಲ್ಲಿಯೂ ಕರ್ಣ ಮಾದುರ್ಯವಾದ ಚೆಂಡೆಯ ಸದ್ದು. ಇಂತಹ ಹಿಮ್ಮೇಳದ ಕಲಾವಿದರಾಗಿ, ಚೆಂಡೆಯ ವಾದನದಲ್ಲಿ ಅದ್ವಿತೀಯತೆ ತೋರಿ, ಯಕ್ಷಕಲೆಯ ಮಿನುಗು ತಾರೆಯಾಗಿ ಕಾಣಿಸಿಕೊಂಡಿದ್ದಾರೆ.
|
ಚೆಂಡೆವಾದಕ ರಾಮಕೃಷ್ಣ ಮಂದಾರ್ತಿ
|
14-07-1960ರಲ್ಲಿ ಮಂದಾರ್ತಿಯ ಪದ್ಮನಾಭಯ್ಯ ಮತ್ತು ರಾಧಾ ದಂಪತಿಗಳ ಪ್ರೀತಿಯ ಸುಕುಮಾರನಾಗಿ, ತುಂಬು ಸಂಸಾರದಲ್ಲಿ ಜನಿಸಿದವರು. ಬಾಲ್ಯದ ಬದುಕಿನ ಬವಣೆ, ಬಡತನ ಆವರಿಸಿಕೊಂಡರೂ ತಂದೆ-ತಾಯಿಯ ಪ್ರೀತಿಯ ನಿಮ್ಮ ಜೀವನದ ಸ್ಪೂರ್ತಿಯ ಸೆಲೆಯಾಯಿತು. ಅಂದಿನ ಕಷ್ಟದ ಬದುಕು, ಶಿಕ್ಷಣವನ್ನು ಕಸಿದುಕೊಂಡು, ವಂಚನೆಯಾದರೂ ಸ್ವಲ್ಪವೂ ಕುಗ್ಗದೇ ಏನನ್ನಾದರೂ ಸಾಧಿಸಬೇಕೆಂಬ ಛಲ, ಬಾಲ್ಯದ ಕನಸು ನೆರವೇರೆದೇ ಇದ್ದಾಗ ಆಗ ಗೋಚರವಾದದ್ದು ಯಕ್ಷಕಲೆಯ ಸೇವೆ. ನಿಮ್ಮ ಹಂಬಲಕ್ಕೆ ಬೆಂಬಲವಾಗಿ ಯಕ್ಷಗುರು ಸುರ್ಗಿಕಟ್ಟೆ ಬಸವ, ಕೊಗ್ಗ ಆಚಾರಿ, ಕೆಮ್ಮಣ್ಣು ಆನಂದರವರು ದಾರಿ ತೋರಿಸಿದರು. ಯಕ್ಷಕಲೆಯ ತಾಳ, ಲಯ, ಪೆಟ್ಟು, ದಸ್ತು, ಕಲಿತು-ಕಲೆತು, ಹಿಮ್ಮೇಳದ ಕಿರಿಯ ಕಲಾವಿದರಾಗಿ, ಕಾಣಿಸಿಕೊಂಡರು.
ಮಾರಣಕಟ್ಟೆ ಮಂದಾರ್ತಿ ಮೇಳದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ಯಕ್ಷಕಲೆಗೆ ತನ್ನಿಂದ ಏನಾದರೂ ಕೊಡಬೇಕು ಎಂದು ಯೋಚಿಸಿ, ಹಗಲಿರುಳು ಶ್ರಮಿಸಿದ್ದಾರೆ. ನಾಟ್ಯದಲ್ಲಿ ಬಹಳ ವಿನ್ಯಾಸದ ಮುದ್ರೆಯ ಪೆಟ್ಟು, ಮುಮ್ಮೇಳದ ಕಲಾವಿದನನ್ನು ಮತ್ತಷ್ಟು ಹುರುಪುಗೊಳಿಸುತ್ತಿದ್ದರು. ವೃತ್ತಿ ಬದುಕಿನಲ್ಲಿ ಯಕ್ಷದಿಗ್ಗಜರಾದ, ದಿವಂಗತ ಕಾಳಿಂಗ ನಾವುಡರು ಸೇರಿದಂತೆ, ಮಹಾನ್ ಕಲಾವಿದರ ಸಖ್ಯದಿಂದ ಬಹಳಷ್ಟು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಯಕ್ಷಕಲೆಯ ಸೇವೆ ನಾಲ್ಕು ದಶಕಗಳನ್ನು ಪೂರೈಸಿದ ರಾಮಣ್ಣನವರು ಚೆಂಡೆಯ ಒಳ ಹಾಗೂ ಹೊರಗಿನ ಎಲ್ಲಾ ಜ್ಞಾನವನ್ನು ಆಳವಾಗಿ ಪಡೆದುಕೊಂಡ ರಾಮಣ್ಣರು ಇಂದು ಯಕ್ಷಕಲೆಯ ಹಿಮ್ಮೇಳದ ಕಲಾವಿದರಲ್ಲಿ ಕಲಾರತ್ನವಾಗಿ ಕಲಾಭಿಮಾನಿಗಳ ಮನದಲ್ಲಿ ಮನೆ ಮಾಡಿದ್ದಾರೆ.
ರಾಮಕೃಷ್ಣ ಮ೦ದಾರ್ತಿಯವರ ಸವಿವರ
***********************
ಸ೦ಪೂರ್ಣ ವಿವರ...
|
|
|